13 Apr 2015

ಗಾರ್ಮೆಂಟ್ ಕಾರ್ಮಿಕರ ಬದುಕು-ಬವಣೆ (3)


ಆಕೆ ಮೈಸೂರು ರಸ್ತೆಯ ಗಾರ್ಮೆಂಟ್ಸ್ ಕಾರ್ಖಾನೆಯೊಂದರಲ್ಲಿ ಟೈಲರ್ ಆಗಿ ದುಡಿಯುತ್ತಿರುವ 38 ವಯಸ್ಸಿನ ಮಹಿಳೆ. ಇಲ್ಲಿ ಕಳೆದ 3 ವರ್ಷಗಳಿಂದ ದುಡಿಯುತ್ತಿದ್ದಾಳೆ. ಗಾರ್ಮೆಂಟ್ಸ್ ಉದ್ಯಮದಲ್ಲಿ ಆಕೆಗಿರುವ ಒಟ್ಟಾರೆ ಅನುಭವ ಹನ್ನೊಂದು ವರ್ಷಗಳದ್ದು. ಕಾರ್ಮಿಕ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಈಕೆ, ಅದೇ ಕಾರಣಕ್ಕೆ ಹಿಂದಿನ ಕಾರ್ಖಾನೆಯಲ್ಲಿ ಫ್ಲೂರ್ ಇಂಜಿನಿಯರ್ನಿಂದ ಶೋಷಣೆಗೆ ಗುರಿಯಾಗಿ, ಸಂಜೆವರೆಗೆ ಕಾರ್ಖಾನೆಯ ಕೊಠಡಿಯೊಂದರಲ್ಲಿ ಗೃಹಬಂಧನದಲ್ಲಿರಬೇಕಾಯಿತು. ಆ ಘಟನೆಯ ವಿರುದ್ಧ ಪೋಲಿಸ್ ಠಾಣೆಯ ಮೆಟ್ಟಿಲೇರಿದ್ದ ಆ ಹೆಣ್ಣುಮಗಳು ಈಗ 4 ವರ್ಷಗಳ ನಂತರ ಅದೇ ಫ್ಲೂರ್ ಇಂಜಿನಿಯರ್ ನನ್ನು ಕಟಕಟೆಗೆ ತಂದು ನಿಲ್ಲಿಸಿರುವುದು ದೊಡ್ಡ ಸಾಧನೆಯೇ ಸರಿ. ಇದಿಷ್ಟೂ ಆಕೆಯ ಕಾರ್ಮಿಕ ಬದುಕಿನ ಚಿತ್ರಣ. ಆದರೆ ಈಗ ಹೇಳಹೊರಟಿರುವ ಘಟನೆ ಅದಲ್ಲ.

ಇದೇ ಹೆಣ್ಣುಮಗಳ ಬದುಕಿನ ಇನ್ನೊಂದು ಘೋರ ಕಥನ ಇದು. ಮಂಡ್ಯ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ಯೊಂದರಲ್ಲಿ ಈಕೆಯ ಕುಟುಂಬದ ವಾಸ. ಗಂಡ, 3 ಗಂಡು ಮಕ್ಕಳ ಸಂಸಾರ. ಹಿರಿಯ ಮಗನಿಗೆ ಹೃದಯದಲ್ಲಿ ಸಮಸ್ಯೆ. ಕೃಷಿ ಆದಾಯದಲ್ಲಿ ಔಷದೋಪಚಾರ, ಮಕ್ಕಳ ಓದು, ಕುಟುಂಬ ನಿರ್ವಹಣೆ ಅಸಾಧ್ಯವೆನಿಸಿದಾಗ ಆಕೆ ಬೆಂಗಳೂರಿನ ಗಾರ್ಮೆಂಟ್ಸ್ತ್ತ ಮುಖ ಮಾಡಿದಳು. ಆದರೆ ನಗರದ ದುಸ್ತರ ಬದುಕಿನ ಅರಿವಿದ್ದುದರಿಂದ ಕುಟುಂಬದ ಉಳಿದ ಸದಸ್ಯರು ಹಳ್ಳಿಯಲ್ಲೇ ನೆಲೆಸಲು ತಿರ್ಮನಿಸಿದರು. ಈಕೆ ಮಾತ್ರ ಕಾರ್ಖಾನೆಗೆ ಹತ್ತಿರವಿದ್ದ ಏರಿಯಾದಲ್ಲಿ ಕೋಣೆಯೊಂದನ್ನು ಬಾಡಿಗೆಗೆ ಪಡೆದು, ದುಡಿಯಲು ತೊಡಗಿದಳು. ಆಕೆಯ ವೇಳಾಪಟ್ಟಿ ಎಷ್ಟು ಖಚಿತವಿತ್ತೆಂದರೆ, ವಾರದ ಆರು ದಿನ ದುಡಿಮೆ. ಪ್ರತೀ ದಿನ ಸಂಜೆ ಕಾರ್ಖಾನೆಯಿಂದ ಮನೆ ತಲುಪುವ ಮೊದಲು ಕಾರ್ಮಿಕ ಸಂಘಟನೆಯ ಕಛೇರಿಗೆ ಭೇಟಿ, ನಂತರ ಮನೆ ಸೇರುವುದು. ಆದರೆ ಪ್ರತಿ ಶನಿವಾರ ಮಾತ್ರ ಆಕೆ ಊರಿಗೆ ಹೊರಟು ಬಿಡುತ್ತಿದ್ದಳು. ರಾತ್ರಿ ಊರನ್ನು ತಲುಪಿ, ಭಾನುವಾರ ಮಕ್ಕಳ ಯೋಗ ಕ್ಷೇಮ ನೋಡಿಕೊಳ್ಳುವುದು, ಕೃಷಿ ಚಟುವಟಿಕೆಗೆ ಹೆಗಲಾಗುವುದು, ಮನೆಯವರ ಬಟ್ಟೆಬರೆ ಒಗೆಯುವುದು, ಅಡಿಗೆ ಮಾಡಿ ಬಡಿಸಿ, ಸಂಜೆ ಮತ್ತೆ ಬೆಂಗಳೂರಿಗೆ ಬಸ್ಸು ಹಿಡಿಯುವುದು ಆಕೆಯ ಮಾಮೂಲಿ ಚಟುವಟಿಕೆಯಾಗಿತ್ತು. ಭಾನುವಾರ ಫಾಕ್ಟೊರ್ಯಲ್ಲಿ ಓ.ಟಿ ಇದ್ದರೆ, ಮಾಡುವುದಿಲ್ಲವೆಂದು ವಾದಕ್ಕೆ ನಿಲ್ಲುತ್ತಿದ್ದಳು. ಒತ್ತಡ ಹೆಚ್ಚಿದ್ದರೆ, ಇನ್ನೊಂದು ದಿನ ರಜೆ ಇದೆಯೇ ಎಂದು ಖಚಿತಪಡಿಸಿಕೊಂಡು ಕೆಲಸಕ್ಕೆ ಕೂರುತ್ತಿದ್ದಳು. ಆಕೆಯ ಅನಿರ್ವಾಯತೆ ಅಷ್ಟಿತ್ತು.
ಆದರೆ.. ಅದೊಂದು ಭಾನುವಾರ ಆಕೆ ಊರಿನಿಂದ ಹೊರಟು ಬರುವುದು ತಡವಾಗಿತ್ತು. ಬೆಂಗಳೂರು ತಲುಪಿದಾಗ ರಾತ್ರಿ 11.30ರ ಸಮಯ. ಬಸ್ಸ್ಟಾಂಡಿನಿಂದ ಕೇವಲ 200 ಮೀಟರ್ ಅಂತರದಲ್ಲಿರುವ ತನ್ನ ಮನೆಗೆ ನಡೆದು ಹೋಗುತ್ತಿರುವಾಗ, 20-21 ವಯಸ್ಸಿನ ಮೂವರು ಯುವಕರು ಆಕೆಗೆ ಚಾಕು ತೋರಿಸಿ, ನಿರ್ಮಾಣ ಹಂತದಲ್ಲಿದ್ದ ಕಟ್ಟಡಕ್ಕೆ ಎಳೆದೊಯ್ದು, ಸರಿರಾತ್ರಿ 2 ಗಂಟೆಯವರೆಗೆ ಬಲವಂತ ಸಂಭೋಗ ನಡೆಸಿದ್ದಾರೆ. ನಂತರ ತಮ್ಮ ಸುಳಿವು ನೀಡಬಹುದೆಂದು ಕೊಲ್ಲುವ ಸಂಚು ನಡೆಸುತ್ತಿದ್ದಾಗ, ಆಕೆ ಕಿರುಚಿಕೊಳ್ಳಲಾಗಿ, ಎಲ್ಲರೂ ಹೆದರಿ ಓಡಿಹೋಗಿದ್ದಾರೆ. ಅಂಥಹ ಆಘಾತದಲ್ಲೂ ಆಕೆ, ನೇರವಾಗಿ ನಡೆದದ್ದು ಹತ್ತಿರದ ಪೋಲಿಸ್ ಠಾಣೆಗೆ. ಅದೃಷ್ಠವಶಾತ್, ತಕ್ಷಣ ಕರ್ಯೋನ್ಮುಖರದ ಪೋಲಿಸರು ಮಾರನೆಯ ಬೆಳಗು ಹರಿಯುವಷ್ಟರಲ್ಲಿ ಅಪರಾಧಿಗಳನ್ನು ಬಂಧಿಸಿದ್ದರು.
ಆದರೆ, ಆಕೆ..? ತನ್ನ ಮೈಮೇಲಿನ ಗಾಯ ಆರುವಷ್ಟೇ ವೇಗವಾಗಿ ಮಾನಸಿಕವಾಗಿ ಚೇತರಿಸಿಕೊಳ್ಳಲು ಸಾಧ್ಯವೇ..? ಆಕೆಗೆ ಪರ್ಯಾಯ ಮಾರ್ಗವಿಲ್ಲ. ದುರ್ಮರ್ಗಿ ಹಾಗೂ ಆತ್ಯಾಚಾರಿ ಯುವಕರ ಕೃತ್ಯಕ್ಕೆ ಕೊರಗುತ್ತಾ ಕೂತರೆ, ತನ್ನ ಮಕ್ಕಳ ಭವಿಷ್ಯ ಮರುಟಿ ಹೋಗುತ್ತದೆ. ಕಾರ್ಖಾನೆಗೆ ರಜೆ ಹಾಕಿದರೆ ಸಂಬಳ, ಅಟೆಂಡೆನ್ಸ್ ಬೋನಸ್ಗೆ ಕತ್ತರಿ. ಕುಟುಂಬಕ್ಕೆ ಈ ಘಟನೆಯ ವಾಸನೆಯೂ ಬಡಿಯುವಂತಿಲ್ಲ. ಇತ್ತ ಮಾಧ್ಯಮಗಳು ಇಡೀ ಘಟನೆಯನ್ನು ಮರುಸೃಷ್ಠಿಸಿ, ಅತಿ ರಂಜಿಸಿ ತಮ್ಮ ಟಿಆರ್ಪಿ ಹೆಚ್ಚಿಸಿಕೊಳ್ಳಲು ಮುಂದಾಗಿವೆ. ಘಟನೆ ನಡೆದಿರುವುದು ತನ್ನ ಏರಿಯಾದಲ್ಲೇ.. ಅಕ್ಕ ಪಕ್ಕದ ಜನರ ಮಾತಿಗೆ ಉತ್ತರವಾಗಬೇಕು..
ಇವೆಲ್ಲವನ್ನೂ ಸಂಭಾಳಿಸಲು ಒಟ್ಟಾರೆಯಾಗಿ ಏನೂ ಆಗದವಳಂತೆ ನಟಿಸಬೇಕು.. ಆಕೆ ಮಾಡಿದ್ದೂ ಅದನ್ನೇ..!
ಏನೂ ಆಗದವಳಂತೆ ಎಂದಿನಂತೆ, ಎಲ್ಲರಲ್ಲೂ ಬೆರೆಯುತ್ತಾ, ತನ್ನ ದೈನಂದಿನ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗುತ್ತಿದ್ದಾಳೆ. ಘಟನೆಯ ಬಗ್ಗೆ ತಿಳಿದಿರುವ ಜನರಲ್ಲಿ ಕೆಲವರು ಮರುಗಿದರೆ, ಇನ್ನೂ ಕೆಲವರು ಪ್ರಶಂಸಿಸುತ್ತಾರೆ. ಆದರೆ ಅನೇಕರು ಕುಹಕವಾಡುತ್ತಾರೆ. ಆಗ ಆಕೆ ನಕ್ಕು ಸುಮ್ಮನಾಗುತ್ತಾಳೆ.. ಮನದಲ್ಲೇ ಕಣ್ಣೀರಾಗುತ್ತಾಳೆ.

ಗಾರ್ಮೆಂಟ್ ಕಾಮಿಕರ ಬದುಕು-ಬವಣೆ (2)

ದುಡಿಯುವ ಸ್ಥಳಗಳಲ್ಲಿ ಮಕ್ಕಳ ಲಾಲನೆ-ಪಾಲನೆ

ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ 30ಕ್ಕಿಂತ ಅಧಿಕ ಮಹಿಳಯರಿದ್ದರೆ, ಅಲ್ಲಿ ಬಾಲವಾಡಿ ಇರಲೇಬೇಕೆಂದು ಕಾನೂನು ಹೇಳುತ್ತದೆ. ಆದರೆ, 500ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರರು ದುಡಿಯುವ ಕಾರ್ಖಾನೆಗಳಲ್ಲೂ ಬಾಲವಾಡಿ ವ್ಯವಸ್ಥೆ ಕಾಣಸಿಗುವುದಿಲ್ಲ. ಇದ್ದರೂ ಅದು ಸಂಪೂರ್ಣ ಅಸಮರ್ಪಕವಾಗಿರುತ್ತದೆ.
ಎಲ್ಲರಿಗೂ ಸಾಮಾನ್ಯವಾಗಿ ತಿಳಿದಿರುವಂತೆ, ಮಹಿಳಾ ಕಾರ್ಮಿಕರ ಹೆರಿಗೆ ರಜೆ 3 ತಿಂಗಳು. ಆದರೆ, ಬಾಲವಾಡಿಗೆ ಮಕ್ಕಳನ್ನು ಕರೆತರಲು ನಿಗದಿ ಮಾಡಿರುವ ವಯೋಮಿತಿ 6 ತಿಂಗಳಿಂದ 6 ವರ್ಷ. ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಅನೇಕ ತಾಯಂದಿರು ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು ಮಗುವಿಗೆ 6 ತಿಂಗಳಾದ ನಂತರ ಹೊಸ ನೇಮಕಾತಿ ಹೊಂದುತ್ತಾರೆ. ಇನ್ನೂ ಕೆಲವರು, ದುಡಿಯುವ ಅನಿವಾರ್ಯತೆಗಾಗಿ 3 ತಿಂಗಳ ಹಸುಗೂಸನ್ನು ನೆಂಟರಿಷ್ಟರ ಮನೆಯಲ್ಲೋ, ನೆರೆಹೊರೆಯಲ್ಲೋ ಬಿಟ್ಟು ಬರುತ್ತಾರೆ. 3 ತಿಂಗಳ ಮಗು ಬಾಲವಾಡಿಗೆ ಏಕೆ ಬೇಡ? ಏಕೆಂದರೆ, ಮಗುವಿಗೆ ಹಾಲೂಡಿಸಲು ತಾಯಿ 1-2 ಗಂಟೆಗೊಮ್ಮೆ ಎದ್ದು ಹೋದರೆ, ಪ್ರೊಡಕ್ಷನ್ ನಿಂತುಹೋಗುತ್ತದೆಂಬ ಆತಂಕ ಆಡಳಿತ ಮಂಡಳಿಯದ್ದು. 6 ವರ್ಷದ ಮಕ್ಕಳಿಗೇ ಬಾಲವಾಡಿ ಸೀಮಿತವಾದರೆ, ಶಾಲೆಯಿಂದ 4 ಗಂಟೆಗೆ ಮನೆ ತಲುಪಿ, ಬೀದಿಯಲ್ಲಿ ಆಟವಾಡುತ್ತಾ ಎಲ್ಲೋ ಬೀಳುವ-ಏಳುವ ಕಂದಮ್ಮಗಳ ಚಿಂತೆಯಲ್ಲಿ ಆ ತಾಯಂದಿರು ಹೇಗೆ ತಾನೇ ಕೆಲಸದಲ್ಲಿ ತೊಡಗಿಸಿಕೊಳ್ಳಬಲ್ಲರು.?
ಬ್ರಾಂಡುಗಳ ಸೋಷಿಯಲ್ ಆಡಿಟಿಂಗ್ನಲ್ಲಿ ಗೆದ್ದು ಬರಲು ಅನೇಕ ಕಾರ್ಖಾನೆಗಳು ಬಾಲವಾಡಿಗಳನ್ನು ತೋರಿಕೆಗೆ ವ್ಯವಸ್ಥೆ ಮಾಡಿರುತ್ತಾರಾದರೂ, ಅಲ್ಲಿಯ ದುರಾವಸ್ಥೆಗಳು ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿರುವುದಿರಲಿ.. ಜೀವಕ್ಕೆ ಕುತ್ತು ತರುತ್ತವೆ. ಇದೇ 2011 ಡಿಸೆಂಬರ್ 14ರಂದು ಮೈಸೂರು ರಸ್ತೆಯ ಕಾರ್ಖಾನೆಯೊಂದರ ಬಾಲವಾಡಿಯಲ್ಲಿ 11 ತಿಂಗಳ ಹೆಣ್ಣು ಮಗುವೊಂದು ಸಾವನ್ನಪ್ಪಿದೆ. ಘಟನೆಯನ್ನು ಆಡಳಿತ ಮಂಡಳಿ ಅತ್ಯಂತ ಚಾಣಾಕ್ಷತನದಿಂದ ಮುಚ್ಚಿಹಾಕುವ ಪ್ರಯತ್ನದಲ್ಲಿದ್ದು, ದುಃಖದಲ್ಲಿದ್ದ ತಂದೆ ತಾಯಿಗಳನ್ನು ಒಳಮಾಡಿಕೊಂಡು, ತಾವೇ ಖುದ್ದು ನಿಂತು, ಮಗುವಿನ ಶವಸಂಸ್ಕಾರ ನೆರವೇರಿಸಿದ್ದಾರೆ. ಆ ಮಗುವಿನ ತಾಯಿ ಮಗು ಸಾವನ್ನಪ್ಪುವ ಕೇವಲ ಒಂದು ದಿನದ ಹಿಂದೆ ಆ ಕಾರ್ಖಾನೆಗೆ ಕೆಲಸಕ್ಕೆ ಸೇರಿದ್ದರು. ಅವರು ಘಟನೆಯನ್ನು ನೆನೆದು, ಎಲ್ಲಾ ತಮ್ಮ ದುರದೃಷ್ಟವೆಂದು ತಮ್ಮನ್ನು ತಾವೇ ಹಳಿದುಕೊಳ್ಳುತ್ತಾರೆ.
ಆದರೆ.. ಆ ಬಾಲವಾಡಿಯ ಅವ್ಯವಸ್ಥೆಗಳ ಬಗ್ಗೆ ಏನೆಂದು ಹೇಳುವುದು? ಮಕ್ಕಳನ್ನು ನೋಡಿಕೊಳ್ಳಲು ತರಬೇತಿ ಹೊಂದಿದ ಟೀಚರ್ ಮತ್ತು ಆಯಾ ಇರಬೇಕೆಂದಿದ್ದರೂ ಸಹ, ಕಾರ್ಖಾನೆಯಲ್ಲಿ ಸ್ವೀಪರ್ ಕೆಲಸ ನಿರ್ವಹಿಸುವ ಕಾರ್ಮಿಕರನ್ನೇ ಅದಕ್ಕೆ ನೇಮಿಸಲಾಗಿದೆ. ಬಾಲವಾಡಿಯ ಕೊಠಡಿಯಲ್ಲೇ ಎಲ್ಲಾ ಸಿಬ್ಬಂದಿ ವರ್ಗಕ್ಕೂ ಕಾಫಿ-ಟೀ ತಯಾರಾಗುತ್ತದೆ. ಜನರೇಟರ್ ಶಬ್ದದ ನಡುವೆ, ಮಕ್ಕಳು ಪರಸ್ಪರ ಕಚ್ಚಾಡುತ್ತಾ, ಆಯಾಗಳ ಒರಟುತನದ ಮಾತಿಗೆ ಬೆದರುತ್ತಾ ಸಂಜೆ ತಾವು ಕಾಣಲಿರುವ ಅಮ್ಮಂದಿರ ಮುಖವನ್ನು ನೆನೆಯುತ್ತಾ ದಿನ ಕಳೆಯುತ್ತವೆ.
ಈ ಹಿಂದೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಇದೇ ಕಾರ್ಖಾನೆಗೆ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆಗಳನ್ನು ಕಂಡು ಛೀಮಾರಿ ಹಾಕಿದ್ದರೂ, ಆಡಳಿತವರ್ಗದ ಕೂದಲೂ ಕೊಂಕಿಲ್ಲ. ಕಳೆದ ಒಂದು ತಿಂಗಳಲ್ಲಿ ಮಕ್ಕಳು ಆಚೆ ಆಟವಾಡುತ್ತಿದ್ದಾಗ ಕೊಠಡಿಯಲ್ಲಿ ಫé್ಯಾನ್ ಬಿದ್ದಿದೆ. ಒಂದೊಮ್ಮೆ ಆ ಸಮಯಕ್ಕೆ ಮಕ್ಕಳು ಒಳಗಿದ್ದಿದ್ದರೆ, ಭಾರೀ ಅನಾಹುತವೇ ನಡೆಯುತ್ತಿತ್ತು. ಇನ್ನೊಂದು ದಿನ ಹೊರಗಿನಿಂದ ಆಯಾ ಚಿಲಕ ಹಾಕಿಕೊಂಡು ಹೊರಗೆ ಹೋಗಿದ್ದಾಗ, ಮಕ್ಕಳು ಒಬ್ಬರ ಮೇಲೊಬ್ಬರು ಹತ್ತಿ ಒಳಗಿನಿಂದ ಚಿಲಕ ಹಾಕಿಕೊಂಡಿದ್ದಾರೆ. ಕೊನೆಗೆ ಬಾಗಿಲು ತೆರೆಯಲು 4 ಗಂಟೆ ಕಾಲ ಬೇಕಾಯಿತು. ಈ ಘಟನೆಗಳ ಹಿನ್ನಲೆಯಲ್ಲಿ ಆಡಳಿತ ವರ್ಗದ ನಿರ್ಲಕ್ಷ್ಯತನವನ್ನು ಗಮನಿಸಿದಾಗ ಹಾಗೂ ಪೋಲಿಸ್ ಠಾಣೆಗೂ ಮಾಹಿತಿಯನ್ನು ನೀಡದೆ, ಮಗುವಿನ ಶವಸಂಸ್ಕಾರ ನಡೆದಿರುವುದನ್ನು ನೋಡಿದರೆ ಈ ಬಗ್ಗೆ ಹಲವು ಸಂಶಯಗಳು ಕಾಡುತ್ತವೆ. ಮಕ್ಕಳನ್ನು ಕಟ್ಟಿಕೊಂಡ ದುಡಿಯುವ ತಾಯಂದಿರ ಆತಂಕಕ್ಕೆ ಕೊನೆಯೇ ಇಲ್ಲದಂತಾಗಿದೆ.
ಇತ್ತ ಮಹಿಳಾ ಕಾರ್ಮಿಕರರ ಹಿತದೃಷ್ಟಿಯಿಂದ ಯಾವುದೇ ಕ್ರಮ ಕೈಗೊಳ್ಳದೇ, ತಮ್ಮ ಬೊಕ್ಕಸ ತುಂಬುವ ಬಗ್ಗೆ ಹಿರಿಹಿರಿ ಹಿಗ್ಗುವ ಕಾರ್ಖಾನೆಯ ಮಾಲೀಕರು, ಕಣ್ಣಿದ್ದೂ ಜಾಣ ಕುರುಡುತನ ತೋರುವ ಬ್ರಾಂಡುಗಳು, ಇವುಗಳ ಅರಿವೇ ಇಲ್ಲದೇ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹವಣಿಸುವ ಸರ್ಕಾರಗಳ ಮಧ್ಯೆ ಇಂಥಹ ಅಸಂಖ್ಯ ಮಹಿಳಾ ಕಾರ್ಮಿಕರರು ದಿನಂಪ್ರತಿ ಒಂದಿಲ್ಲೊಂದು ಅಭದ್ರತೆಯಲ್ಲಿ ನಲುಗುತ್ತಲೇ ಇದ್ದಾರೆ.

ಗಾರ್ಮೆಂಟ್ ಕಾರ್ಮಿಕರ ಬದುಕು-ಬವಣೆ (1)


ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರ ನೀರಿನ ಬವಣೆ…

ದೇಶದ ಆರ್ಥಿಕತೆಗೆ ಅತ್ಯಂತ ದೊಡ್ಡ ಕೊಡುಗೆಯನ್ನೇ ನೀಡುತ್ತಿರುವ ಬೆಂಗಳೂರಿನ ಗಾರ್ಮೆಂಟ್ಸ್ ಉದ್ಯಮದ ಯಶಸ್ಸಿನ ಹಿಂದೆ ಸುಮಾರು 5 ಲಕ್ಷಕ್ಕೂ ಅಧಿಕ ಸಂಖ್ಯೆಯ ಶ್ರಮಿಕ ವರ್ಗವಿದೆ. ಅದರಲ್ಲಿ ಶೇಕಡಾ 85% ಕಾರ್ಮಿಕರ ರು ಮಹಿಳೆಯರು ಎಂಬುದು ಗಮನಾರ್ಹ. ನಗರದ ಪೀಣ್ಯ ಕೈಗಾರಿಕಾ ಪ್ರದೇಶ, ಯಶವಂತಪುರ ಕೈಗಾರಿಕ ವಲಯ, ಬೊಮ್ಮನಳ್ಳಿ ಹಾಗೂ ಮೈಸೂರು ರಸ್ತೆಗಳಲ್ಲಿ ಇರುವ ಸುಮಾರು 1000ಕ್ಕೂ ಹೆಚ್ಚಿನ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ದುಡಿಯುವ ಈ ಮಹಿಳೆಯರು ಹೆಚ್ಚಿನ ವಿದ್ಯಾಭ್ಯಾಸವಿಲ್ಲದ, ಹಳ್ಳಿಗಳಿಂದ ವಲಸೆ ಬಂದಿರುವರಾಗಿದ್ದಾರೆ.
ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಲಗ್ಗೆರೆ, ರಾಜಗೋಪಾಲನಗರ, ಹೆಗ್ಗನಹಳ್ಳಿ, ಭೈರವೇಶ್ವರ ನಗರಗಳಲ್ಲಿ ಹೆಚ್ಚಾಗಿ ಗಾರ್ಮೆಂಟ್ಸ್ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರು ವಾಸಿಸುತ್ತಿದ್ದಾರೆ. ಬೆಳಿಗ್ಗೆ 8.30ಕ್ಕೆ ಕೆಲಸಕ್ಕೆಂದು ಹೊರಡುವ ಇವರು ಸಂಜೆ ಮನೆ ತಲುಪುವುದು 7 ಗಂಟೆ ನಂತರವೇ. ಈ ಪ್ರದೇಶಗಳಲ್ಲಿ ದೈನಂದಿನ ಬದುಕಿಗೆ ಅತ್ಯಗತ್ಯವಾದ ನೀರಿಗಾಗಿ ಬಹಳ ಪರಿಪಾಟಲು. ಸಾರ್ವಜನಿಕ ನೀರು ಸರಬರಾಜು ವ್ಯವಸ್ಥೆ ಸಮರ್ಪಕವಾಗಿಲ್ಲ. ಕೊಳಾಯಿಯೇ ಇಲ್ಲದ, ತುಕ್ಕು ಹಿಡಿದ ಪೈಪು, ನೀರು ಬಂದ ಕುರುಹೇ ಇಲ್ಲದ ಪರಿಸ್ಥಿತಿ ಇದ್ದು, ನೀರಿಗಾಗಿ ಹೆಚ್ಚಿದ ಹಾಹಾಕಾರ ಈ ಪ್ರದೇಶಗಳಲ್ಲಿ ಎದ್ದು ಕಾಣುತ್ತದೆ. ಆದರೆ ಕಾಲಾನುಕಾಲಕ್ಕೆ ಹೊಸದಾಗಿ ಬಣ್ಣ ಬಳಿಸಿಕೊಂಡು ಸ್ಥಳೀಯ ಕಾರ್ಪೋರೇಟರ್ ಹಾಗೂ ಶಾಸಕರ ಹೆಸರು ರಾರಾಜಿಸುವ ಖಾಲಿ ನೀರಿನ ಟ್ಯಾಂಕುಗಳು ಮಾತ್ರ ರಸ್ತೆಗೊಂದರಂತೆ ಬೆರ್ಚಪ್ಪನಂತೆ ನಿಂತಿವೆ. ಬಿಬಿಎಂಪಿಯವರು ಲಾರಿಯಲ್ಲಿ ವಾರಕ್ಕೊಂದೇ ದಿನ ನೀರು ಸರಬರಾಜು ಮಾಡುವುದು. ಇಡೀ ವಾರಕ್ಕೆ ಅಗತ್ಯವಾದ ಕುಡಿಯುವ ಹಾಗೂ ದಿನಬಳಕೆ ನೀರನ್ನು ಭಾನುವಾರದಂದು ಮಾತ್ರ ಹಿಡಿದಿಟ್ಟುಕೊಳ್ಳಬೇಕು. ಇನ್ನು ಬಿ.ಬಿ.ಎಂ.ಪಿಯ ಉಚಿತ ನೀರನ್ನು ಸರಬರಾಜು ಮಾಡುವ ಟ್ಯಾಂಕರ್ಗಾಗಿ ಜಾತಕಪಕ್ಷಿಗಳಂತೆ ಕಾಯಬೇಕು. ಪ್ರತಿ ಭಾನುವಾರ ನಿಗದಿತ ಸ್ಥಳಗಳಲ್ಲಿ, ಸಮಯಕ್ಕೆ ನೀರನ್ನು ಸರಬರಾಜು ಮಾಡಬೇಕೆಂಬ ಆದೇಶವಿದ್ದರೂ, ಸರಿಯಾದ ಸಮಯಕ್ಕೆ ಟ್ಯಾಂಕರ್ಗಳು ಬರುವುದಿಲ್ಲ. ಬಂದರೂ ಸಹ 10-20 ರೂಪಾಯಿಯನ್ನು ಡ್ರೈವರ್ಗೆ ಲಂಚ ನೀಡಲೇಬೇಕಾದ ಅನಿವಾರ್ಯತೆ. ಹಾಗೇ ನೀಡಿದರೂ 5 ಕೊಡ ಹಿಡಿಯುವುದರೊಳಗಾಗಿ ಏಳು ಕೆರೆ ನೀರುನ್ನು ನೋಡಿದ ಅನುಭವ. ಚಿಕ್ಕ ಚಿಕ್ಕ ಬೆಂಕಿಪೊಟ್ಟಣದಾಕಾರದ ಮನೆಗಳನ್ನು ಕಟ್ಟಿ ಕಾರ್ಮಿಕರಿಗೆ ನೀಡಿರುವ ಬಹುತೇಕ ಮನೆಮಾಲೀಕರು ಅಲ್ಲಿರುವ ಬಾಡಿಗೆದಾರರಿಗೆ ಕನಿಷ್ಠ ನೀರಿನ ವ್ಯವಸ್ಥೆ ಕಲ್ಪಿಸಿಯೇ ಇಲ್ಲ. ಈ ನೀರಿನ ಸಮಸ್ಯೆಯನ್ನೇ ಬಂಡವಾಳವಾಗಿಸಿ ಕೊಂಡ ಕೆಲವರು ಸೈಡ್ ಬಿಸಿನೆಸ್ ಮಾಡುತ್ತಿದ್ದಾರೆ. ಪ್ರತಿ ಕೊಡ ಕುಡಿಯುವ ನೀರಿಗೆ 2 ರೂಪಾಯಿಯಾದರೆ, ಪ್ರತಿ ಕೊಡ ದಿನಬಳಕೆ ನೀರಿಗೆ 1.50 ರೂಪಾಯಿ ವಸೂಲಿ ಮಾಡುತ್ತಾರೆ. ಹಾಗೆ ಹಣಕೊಟ್ಟು ಕೊಳ್ಳಲೂ ಸರತಿಯಲ್ಲಿ ಗಂಟೆಗಟ್ಟಲೆ ಕಾಯಲೇಬೇಕು. ತಿಂಗಳಿಗೆ ಸಿಗುವ 3 ಸಾವಿರ ಸಂಬಳದಲ್ಲಿ 700 ರೂಪಾಯಿಗಳನ್ನು ನೀರಿಗಾಗಿ ಮೀಸಲಿಡಬೇಕಾಗಿದೆ. ಸೈಕಲ್, ಆಟೋರಿಕ್ಷಾ ಮತ್ತು ಕಾಲ್ನಡಿಗೆಯಲ್ಲಿ ನೀರನ್ನು ಒಂದು-ಒಂದುವರೆ ಕಿ.ಮೀ.ಯಿಂದ ಹೊತ್ತು ತರಬೇಕಾಗಿದೆ. ಹೀಗೆ ಹೊತ್ತು ತರುವ ನೀರಿಗೂ ನಿಗದಿತ ಸಮಯವೆಂದೇನೂ ಇಲ್ಲ. ಬೆಳಿಗ್ಗೆ 8.30ರಿಂದ ಕೊಡ ಹಿಡಿದು ಕ್ಯೂನಲ್ಲಿ ನಿಂತರೆ, ನೀರು ಬಂದಾಗ ತುಂಬಿಕೊಳ್ಳಬೇಕು. ಒಂದು ದಿನ 9ಕ್ಕೆ ಬಿಟ್ಟರೆ, ಮತ್ತೊಂದು ದಿನ 12.. ಹೀಗೇ ನೀರನ್ನು ತುಂಬಿಸಿಕೊಳ್ಳುವ ಪರಿಪಾಟಲು. ಇಡೀ ವಾರದ ದೈಹಿಕ, ಮಾನಸಿಕ ಶ್ರಮವನ್ನೆಲ್ಲಾ ಕಳೆಯಬೇಕೆಂದಿದ್ದ ಭಾನುವಾರ ಇಂತಹ ಅನಿಶ್ಚಿತತೆಯಲ್ಲೇ ಕಳೆದು ಹೋಗುತ್ತದೆ.
ಈ ಪ್ರದೇಶಗಳಲ್ಲಿನ ನೀರಿನ ಸಮಸ್ಯೆಗೆ ಪರಿಹಾರ ಎಂದೂ ? ಕರ್ನಾಟಕದ ‘ಅಭಿವೃದ್ಧಿ’ಯ ಪತಾಕೆ ಜಾಹೀರಾತುಗಳಲ್ಲಿ ರಾರಾಜುಸುತ್ತಿದೆ. ನೀರಿನ ದಾಹ ತೀರಿಸಲು ಯೋಜನೆಗಳ ಸುರಿಮಳೆಯನ್ನು ಆಡಳಿತ ನಡೆಸುವವರು ಉದುರಿಸುತ್ತಿದ್ದಾರೆ. ರಾಜ್ಯದ ರಾಜಧಾನಿಯಲ್ಲೇ ನೀರಿಗೆ ಇಂತಹ ಪರಿಸ್ಥಿತಿ ಇರುವಾಗ ಇನ್ನು ಗ್ರಾಮಗಳ ಪರಿಸ್ಥಿತಿಯನ್ನು ಕೇಳುವವರು ಗತಿಯಿಲ್ಲ.
ದುಡಿಯುವ ವರ್ಗದ ದೈನಂದಿನ ಸಮಸ್ಯೆಗಳು ಹಲವಾರು. ಕಾರ್ಖಾನೆ ಮತ್ತು ಕೆಲಸ ಮಾಡುವ ಸ್ಥಳಗಳಲ್ಲಿ ಸಮೂಹ ಚೌಕಾಸಿಯ ಮೂಲಕ ತಮಗೆ ಸಿಗಬೇಕಾದ ಹಕ್ಕು ಸವಲತ್ತುಗಳನ್ನು ಪಡೆಯಲು ಹೋರಾಟ ಮಾಡುವ ಅನಿವಾರ್ಯತೆಯೊಂದಿಗೆ, ಸಮಾಜದ ನಾಗರಿಕ ಬದುಕಿನಲ್ಲಿ ಹತ್ತು ಹಲವಾರು ಸವಾಲುಗಳನ್ನು ಎದುರಿಸ ಬೇಕಾಗಿದೆ.
ಆದರೆ ದುಡಿಯುವ ವರ್ಗವನ್ನು ಪ್ರತಿನಿಧಿಸುವ ಕಾರ್ಮಿಕ ಸಂಘಟನೆಗಳು ಈ ವರ್ಗದ ವೈಯ್ಯುಕ್ತಿಕ ಬದುಕಿನ ಸವಾಲು-ಪ್ರಶ್ನೆಗಳನ್ನು ಗಮನಿಸಲು ಅಥವಾ ಹೋರಾಟದ ಪರಿಧಿಯಲ್ಲಿ ತರಲು ತಯಾರಿಲ್ಲದಾಗಿವೆ.
ಇದರಿಂದಾಗಿ ಕಾರ್ಮಿಕರ ವರ್ಗದ ಹೋರಾಟ ಪ್ರಜ್ಞೆಯು ಕುಂಠಿತಗೊಂಡು ವೈಯ್ಯುಕ್ತಿಕ ಬದುಕಿನ ಸಮಸ್ಯೆಗಳನ್ನು ಸರಿತೂಗಿಸುವ ಜಂಜಾಟದಲ್ಲಿ ತಮ್ಮ ವರ್ಗ ಜವಾಬ್ದಾರಿಗಳತ್ತ ಮನಸ್ಸು ಹಾಯದಂತೆ ಈ ವ್ಯವಸ್ಥೆ ತಡೆಯೊಡ್ಡಿದೆ. ಈ ಮಿತಿಯನ್ನು ಮೀರಿ ಕಾರ್ಮಿಕ ಸಂಘಟನೆಗಳು ಕಾರ್ಯೋನ್ಮುಖವಾಗಿದೆ.